ದೇಶಪ್ರೇಮಿ..!
ನಾನು ಉಟ್ಟ ಖಾದಿಯು,
ನನ್ನೊಡನೆಯೇ ಕೋಪಿಸಿದೆ...
'ಭಾರತ್ ಮಾತಾ ಕೀ ಜೈ'
ಅನ್ನದಿರುವುದೇ ಕಾರಣವಂತೆ..
ಸ್ವಾತಂತ್ರ್ಯ ದಿನದಲ್ಲಿ ನಾನು,
ಬಾನಿಗೇರಿಸುವ ತಿರಂಗಾ ಕೂಡ,
ನನ್ನನ್ನು ನೋಡಿ ಸಿಟ್ಟಾಗಿದೆ..
ಅದಕ್ಕೂ ಎತ್ತರದಲ್ಲಿ ನಾನವತ್ತು,
ಹಸಿರು ಧ್ವಜ ಹಾರಿಸಿದ್ದೆನಂತೆ..
ಗಣರಾಜ್ಯೋತ್ಸವದ ಪರೇಡಿನಲ್ಲಿ,
ಶಿಸ್ತಿನಿಂದ ನಡೆಯುವ ನನ್ನನ್ನು,
ಭಾರತವೇ ಕೆಂಗಣ್ಣಿನಿಂದ ನೋಡುತ್ತಿದೆ..
'ಈದ್ ಮಿಲಾದ್' ದಿನದಂದು ನಾನು,
ಜೈಕಾರವಿಡುತ್ತಾ ಜಾಥಾ ಹೋಗಿದ್ದಕ್ಕಂತೆ..
ಭಾರತವನ್ನು ವರ್ಣಿಸುತ್ತಾ ನಾನು,
ಬರೆದ ಎರಡು ಸಾಲುಗಳೂ ಈಗ,
ಕಾಗದದಿಂದ ಅಳಿಸಿ ಹೋಗುತ್ತಿದೆ..
ಮೊನ್ನೆ ನಾನು ನನ್ನ ಧರ್ಮದ ಕುರಿತು,
ಮೂರು ಪುಟ ಮೀರಿ ಬರೆದಿದ್ದೆನಂತೆ..
ದೇಶಭಕ್ತಿಯಿಂದ ನಾನು ರಾಗದೊಡನೆ,
'ಜನಗಣಮನ' ಹಾಡಿದರೂ ಇವತ್ತು,
ದೇಶದ್ರೋಹಿಯೆಂದು ಕೂಗುತ್ತಿದ್ದಾರೆ..
'ವಂದೇ ಮಾತರಂ' ಬೇಡ ಅಂದಿದ್ದು,
ಇಡೀ ಭಾರತಕ್ಕೆ ಅಪಮಾನವಂತೆ..
ಎದೆತಟ್ಟಿ ಹೇಳುವೆನು ಮತ್ತೊಮ್ಮೆ..,
ನಾನು ಅಪ್ಪಟ ದೇಶಪ್ರೇಮಿ..
ಧರ್ಮಗಳೆಲ್ಲವ ಬದಿಗಿಟ್ಟು,
ದೇಶಕ್ಕಾಗಿ ಜೀವಿಸುವ ನಾನು,
ಅಪ್ಪಟ ದೇಶಪ್ರೇಮಿ..
#ತೂತು ಬಿದ್ದ ಜೋಪಡಿಯಲ್ಲಿ...
-> ಹಕೀಂ ಪದಡ್ಕ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou