ಅನ್ನ(ಭಾಗ್ಯ)ದಾತ..
ರೈತನಲ್ಲಿ ಬೆಳೆದ ಬೆಳೆಗಳು,
ಅವನೊಯ್ದ ನೀರನ್ನು ಕುಡಿಯುತ್ತಿಲ್ಲ,
ಕಾರಣ, ದಿನವಿಡೀ ದುಡಿದು ಹರಿಸಿದ,
ಬೆವರನ್ನು ಕುಡಿದೇ ಅವುಗಳು,
ದಾಹ ತೀರಿಸಿಕೊಂಡಿದೆ..
ಬಿತ್ತಿದ ಬೀಜಗಳೂ ಕೂಡ,
ಮೊಳಕೆಯೊಡೆಯಲು ಅಂಜುತ್ತಿದೆ..,
ಬೆಳೆದು ಹೆಮ್ಮರವಾದರೆ ಕೊನೆಗೆ,
ಅವನ ನೇಣು ಕುಣಿಕೆಗೆ,
ಕಂಬವಾಗಬಹುದೆಂಬ ಭಯದಲಿ..
ಗದ್ದೆಯ ನಡುವೆ ಹೂತು ಹೋಗಿರುವ,
ಬಂಡೆಕಲ್ಲುಗಳೂ ಕಣ್ಣೀರಿಡುತ್ತಿದೆ..,
ಬಡಪಾಯಿ ಅನ್ನದಾತನ,
ಅಗಾಧ ನಷ್ಟಗಳ ಪೈಕಿ,
ತಾನೂ ಒಂದು ಪಾಲಾದೆನೆಂದು..
ನೇಗಿಲ ಪೆಟ್ಟಿನ ನೋವಲ್ಲೂ,
ಉಳುವ ಭೂಮಿ ಸಂಭ್ರಮಿಸಿದೆ..,
ಕಟ್ಟಡ-ಮಹಡಿಗಳ ಭಾರವಿಲ್ಲದೆ,
ಜಗಕ್ಕೇ ಆಸರೆಯಾಗಿ ತಾನು,
ಹಸಿರಿನಿಂದ ಕಂಗೊಳಿಸುವೆನೆಂದು..
---------------
#ಹಕೀಂ ಪದಡ್ಕ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou